ಬರೀ 3 ತಾಸಿನಲ್ಲೇ 47 ಕೋಟಿ ವರ್ಗಾಯಿಸಿ ವಂಚನೆ;3 ಸಾವಿರ ನಕಲಿ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗ


 ಗಳೂರು: ಹಾಂಕ್‌ಕಾಂಗ್‌ ಮೂಲದ ಹ್ಯಾಕರ್‌ ಗಳ ಮೂಲಕ ನಗರದ ವಿಜ್ಡಮ್‌ ಫೈನಾನ್ಸ್‌ ಪ್ರೈವೇಟ್ ಲಿಮಿಡೆಟ್‌ಗೆ 47 ಕೋಟಿ ರೂ. ವಂಚಿಸಿದ್ದ ದುಬೈ ಮೂಲದ ವಂಚಕರಿಗೆ ಸಹಾಯ ಮಾಡಿದ್ದ ಇಬ್ಬರು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಪೊಲೀಸರ ಬಲೆಗೆ ಬಿದ್ದಿದ್ದಾರೆ

ವಿಜ್ಡಮ್‌ ಫೈನಾನ್ಸ್‌ ಸಂಸ್ಥೆಯ ವೆಬ್‌ ಸೈಟ್‌, ಆಯಪ್‌ ಹ್ಯಾಕ್‌ ಮಾಡಿರುವ ವಂಚಕರು, 3 ಸಾವಿರಕ್ಕೂ ಹೆಚ್ಚು ನಕಲಿ ಬ್ಯಾಂಕ್‌ ಖಾತೆಗಳಿಗೆ 47 ಕೋಟಿ ರೂ.

ಅನ್ನು ಕೇವಲ 3 ಗಂಟೆಯಲ್ಲಿ ತಡರಾತ್ರಿ ವರ್ಗಾವಣೆ ಮಾಡಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.


3 ಸಾವಿರ ಖಾತೆಗಳಿಗೆ 47 ಕೋಟಿ ರೂ. ವರ್ಗ:

ಬ್ಯಾಂಕ್‌ ನ ವೆಬ್‌ಸೈಟ್‌, ಆಯಪ್‌ ಹ್ಯಾಕ್‌ ಮಾಡಿರುವ ವಂಚಕರು, 3 ಸಾವಿರಕ್ಕೂ ಹೆಚ್ಚು ನಕಲಿ ಬ್ಯಾಂಕ್‌ ಖಾತೆಗಳಿಗೆ 47 ಕೋಟಿ ರೂ. ಅನ್ನು ಕೇವಲ 3 ಗಂಟೆಯಲ್ಲಿ ತಡರಾತ್ರಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಬ್ಯಾಂಕ್‌ ಕೇವಲ 5 ಲಕ್ಷ ರೂ.ವರೆಗೆ ಮಾತ್ರ ಸಾಲ ನೀಡುತ್ತಿದ್ದರಿಂದ ಆರೋಪಿಗಳು, ಎರಡು ದಿನಗಳ ಕಾಲ ತಡರಾತ್ರಿ ಕರ್ನಾಟಕ, ರಾಜಸ್ಥಾನ, ಹೈದರಾಬ್‌, ಗುಜರಾತ್‌ ರಾಜ್ಯದಲ್ಲಿನ ನಕಲಿ ಖಾತೆಗೆಳಿಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಸೈಬರ್‌ ಕ್ರೈಂ ಪೊಲೀಸರು ಮಾಹಿತಿ ನೀಡಿದರು.


ರಾಜಸ್ಥಾನದ ಉದಯಪುರ ಜಿಲ್ಲೆಯ ಸಂಜಯ್‌ಪಟೇಲ್‌ (35) ಹಾಗೂ ಬೆಳಗಾವಿ ಮೂಲದ ಇಸ್ಮಾಯಿಲ್‌ ಅಕ್ತರ್‌(30) ಬಂಧಿತರು.


ಆರೋಪಿಗಳಿಂದ ಹಣ ಮತ್ತು ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ. ಹಾಗೆಯೇ ಪ್ರಕರಣದಲ್ಲಿ 10 ಕೋಟಿ ರೂ. ಜಪ್ತಿ ಮಾಡಲಾಗಿದೆ ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ಸಿಂಗ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ವಿಜ್ಡಮ್‌ ಫೈನಾನ್ಸ್‌ ಪ್ರೈವೇಟ್ ಲಿಮಿಡೆಟ್‌ನ ಹಿರಿಯ ವ್ಯವಸ್ಥಾಪಕ ಪ್ರಕಾಶ್‌ ಅವರು ವಂಚನೆ ಸಂಬಂಧ ದೂರು ನೀಡಿದ್ದರು. ಆ. 6 ಹಾಗೂ ಆ.7ರಂದು ರಾತ್ರಿ ಅನಧಿಕೃತ ಖಾತೆಗಳಿಗೆ ಫೈನಾನ್ಸ್‌ ಹಣ ವರ್ಗಾವಣೆ ಆಗಿದೆ ಎಂಬುದಾಗಿ ದೂರಿನಲ್ಲಿಉಲ್ಲೇಖಿಸಿದ್ದರು. ಆ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕೃತ್ಯದಲ್ಲಿ ಇನ್ನೂ ಹಲವರ ಪಾತ್ರವಿರುವುದು ಕಂಡುಬಂದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತರು ಹೇಳಿದರು.


ನಗರದ ಮಾರತ್ತಹಳ್ಳಿಯ ವಿಜ್ಡಮ್‌ ಫೈನಾನ್ಸ್‌ ಪ್ರೈವೇಟ್ ಲಿಮಿಡೆಟ್‌ ಶಾಖೆ ಇದ್ದು, ಗ್ರಾಹಕರ ಅನುಕೂಲಕ್ಕಾಗಿ ಮನಿವ್ಯೂವ್‌ ಎಂಬ ಆಯಪ್‌ ಸಿದ್ಧಪಡಿಸಿಕೊಂಡಿದೆ. ಈ ಆಯಪ್‌ ಡೌನ್‌ಲೋಡ್‌ ಮಾಡಿಕೊಂಡು ಕೆವೈಸಿ ನೀಡಿದರೆ 5 ಲಕ್ಷ ರೂ.ವರಗೆ ಗ್ರಾಹಕರಿಗೆ ಸಾಲ ನೀಡುತ್ತದೆ. ಆ.6 ಮತ್ತು ಆ.7ರಂದು ತಡರಾತ್ರಿ ಕಂಪನಿಯ ಫೈನಾನ್ಸ್‌ ಸರ್ವರ್‌ ಮತ್ತು ಆಯಪ್‌, ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿ 47 ಕೋಟಿ ರೂ.ವರೆಗೆ ಕಂಪನಿಯ ಖಾತೆಗಳಿಂದ ಅಕ್ರಮವಾಗಿ ಬೇರೆ ಖಾತೆಗಳಿಗೆ ವರ್ಗಾಯಿಸಿದ್ದರು. ಇನ್ನು ಈ ಬಗ್ಗೆ ಕಂಪನಿಯ ಆಂತರಿಕಾ ತನಿಖೆ ನಡೆಸಿದಾಗ ಈ ವ್ಯವಹಾರಗಳು ಕಂಪನಿಯ ಅಧಿಕೃತ ಸಿಸ್ಟಂ ಅಥವಾ ವೈಟ್‌ಲಿಸ್ಟೆಟೆಡ್‌ ಐಪಿ ವಿಳಾಸದಿಂದ ನಡೆದಿಲ್ಲ ಎಂಬುದು ಗೊತ್ತಾಗಿತ್ತು. ಹೀಗಾಗಿ ಕಂಪನಿಯ ಹಿರಿಯ ವ್ಯವಸ್ಥಾಪಕ ಪ್ರಕಾಶ್‌ ದೂರು ನೀಡಿದ್ದರು ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.


ಇನ್ನು ಆರೋಪಿಗಳ ಪೈಕಿ ಸಂಜಯ್‌ ಪಟೇಲ್‌ ಅಮಾಯಕ ವ್ಯಕ್ತಿಗಳಿಂದ ಗುರುತಿನ ಚೀಟಿ ಪಡೆದು, ಅವರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಕೆಲವೊಂದು ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆಯುತ್ತಿದ್ದ. ಮತ್ತೊಬ್ಬ ಆರೋಪಿ ಇಸ್ಮಾಯಿಲ್‌ ಅಕ್ತರ್‌ ಡಿಜಿಟಲ್‌ ಮಾರ್ಕೆಟಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಈತ ವರ್ಚುವಲ್‌ ಪ್ರ„ವೇಟ್‌ ನೆಟ್‌ವರ್ಕ್‌ (ವಿಪಿಎನ್‌) ಮೂಲಕ ತನ್ನ ಹೆಸರಿನಲ್ಲಿ ಕೆಲವೊಂದು ಸರ್ವರ್‌ಗಳನ್ನು ಖರೀದಿ ಅಥವಾ ಬಾಡಿಗೆ ಪಡೆಯುತ್ತಿದ್ದ. ಈತ ಟೆಲಿಗ್ರಾಂ ಆಯಪ್‌ ಹೆಚ್ಚು ಬಳಸುತ್ತಿದ್ದರಿಂದ ದುಬೈನಲ್ಲಿರುವ ವಂಚಕರು, ಈ ಆಯಪ್‌ ಮೂಲಕವೇ ಅಕ್ತರ್‌ನನ್ನುಪರಿಚಯಿಸಿಕೊಂಡಿದ್ದಾರೆ. ಬಳಿಕ ನೀನು ಖರೀದಿ ಅಥವಾ ಬಾಡಿಗೆ ಪಡೆದಿರುವ ಸರ್ವರ್‌ಗಳನ್ನು ತಮಗೆ ಬಾಡಿಗೆ ರೂಪದಲ್ಲಿ ನೀಡಿದಗೆ ಹೆಚ್ಚುವರಿ ಹಣ ಕೊಡುವುದಾಗಿ ಆಮಿಷವೊಡಿದ್ದಾರೆ. ಅದರಂತೆ ಆರೋಪಿ 5 ಸರ್ವರ್‌ಗಳನ್ನು ಬಾಡಿಗೆ ನೀಡಿದ್ದ ಎಂದು ಪೊಲೀಸರು ಹೇಳಿದರು.


ಹಾಂಕ್‌ಕಾಂಗ್‌ ಮೂಲದ ಹ್ಯಾಕರ್‌ಗಳಿಂದ ಹಣ ಲೂಟಿ: ಈ ಸರ್ವರ್‌ಗಳನ್ನು ಖೀರಿದಿಸಿದ ದುಬೈನಲ್ಲಿರುವ ಆರೋಪಿಗಳು, ಹಾಂಕ್‌ಕಾಂಗ್‌ ಮೂಲದ ಹ್ಯಾಕರ್‌ಗಳಿಗೆ ನೀಡಿ, ಈ ಮೂಲಕ ಫೈನಾನ್ಸ್‌ನ ಅಪ್ಲಿಕೇಷನ್‌ ಪ್ರೋಗ್ರಾಮಿಂಗ್‌ ಇಂಟರ್‌ ಫೇಸ್‌(ಎಪಿಐ) ಬದಲಾಯಿಸಿ ಬ್ಯಾಂಕ್‌ನ ಭದ್ರತಾ ಆಯಪ್‌ಗ್ಳನ್ನು ತಪ್ಪಿಸಲು ಯತ್ನಿಸಿದ್ದಾರೆ. ಬಳಿಕ ಹಾಂಕ್‌ ಕಾಂಗ್‌ ಮತ್ತು ಲುತುವೇನಿಯಾ ಆಧಾರಿತಾ ಐಪಿ ವಿಳಾಸಗಳ ಮೂಲಕ ಫೈನಾನ್ಸ್‌ನಲ್ಲಿರುವ ಖಾತೆಗಳಿಂದ ಬೇರೆಯ ಪ್ರತಿ ಖಾತೆಗಳಿಗೆ 5 ಲಕ್ಷ ರೂ. ನಂತೆ 1782 ವ್ಯವಹಾರಗಳ ಮೂಲಕ 3 ಸಾವಿರಕ್ಕೂ ಹೆಚ್ಚು ಖಾತೆಗಳಿಗೆ 47 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ. ಅದು ಅಕ್ತರ್‌ ನೀಡಿದ 5 ಸರ್ವರ್‌ಗಳ ಮೂಲಕವೇ ನಡೆದಿದೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.


ಹೀಗಾಗಿ 3 ಸಾವಿರ ಖಾತೆಗಳ ಪೈಕಿ 656 ಬ್ಯಾಂಕ್‌ ಖಾತೆಗಳನ್ನು ಜಪ್ತಿ ಮಾಡಿಲಾಗಿದೆ ಎಂದು ಸೈಬರ್‌ ಠಾಣೆ ಪೊಲೀಸರು ಮಾಹಿತಿ ನೀಡಿದರು.


ಸರ್ವರ್‌ಗಳನ್ನು ಬಾಡಿಗೆ ನೀಡಿದ್ದ ಆರೋಪಿ

ಪ್ರಕರಣದಲ್ಲಿ ಮೊದಲಿಗೆ ಆರೋಪಿ ಸಂಜೀವ್‌ ಪಾಟೀಲ್‌ನನ್ನು ಬಂಧಿಸಿ ತನಿಖೆ ನಡೆಸಿದಾಗ ಆತನ ಹೆಸರಿನಲ್ಲಿ ರಾಷ್ಟ್ರೀಯ ಬ್ಯಾಂಕ್‌ನ ಖಾತೆಗೆ 27.39 ಲಕ್ಷ ರೂ. ವರ್ಗಾವಣೆ ಆಗಿರುವುದು ಪತ್ತೆಯಾಗಿತ್ತು. ತನಿಖೆ ಮುಂದುವರಿಸಿದಾಗ ಕಂಪನಿಗೆ ಸೇರಿದ 5.5 ಕೋಟಿ ರೂ. ಹೈದಾರಾಬಾದ್‌ನ ಇಚಿಲೋನ್‌ ಸೈನ್ಸ್‌ ಟೆಕ್‌ ಸಂಸ್ಥೆಯ ಖಾತೆಗೆ ವರ್ಗಾಯಿಸಿ, ಫ್ಲಿಪೊ ಪೇ(ಐಡಿಎಫ್‌ಸಿ ಬ್ಯಾಂಕ್‌ ಖಾತೆಗೆ) ವರ್ಗಾವಣೆ ಆಗಿರುವುದು ದೃಢಪಟ್ಟಿತ್ತು. ಇಚಿಲೋನ್‌ ಸೈನ್ಸ್‌ ಟೆಕ್‌ ಸಂಸ್ಥೆಯು, ವೆಬ್‌ಯಾನೆ ಡೇಟಾ ಸೆಂಟರ್‌ಗೆ ಸೇರಿದ ಐಪಿ ವಿಳಾಸಗಳ ಮೂಲಕ ವ್ಯವ್ಯಹಾರ ನಡೆಸಿದೆ. ಆ ಐಪಿ ವಿಳಾಸಗಳು ಇಸ್ಮಾಯಿಲ್‌ ಅಕ್ತರ್‌ 3 ಸಾವಿರ ರೂ.ಗೆ ಖರೀದಿಸಿದ್ದ ಸರ್ವರ್‌ಗಳ ಮೂಲಕ ವ್ಯವಹಾರ ನಡೆದಿರುವುದು ತನಿಖೆಯಿಂದ ಗೊತ್ತಾಗಿದೆ. ಹಾಗೆಯೇ ಈ 5 ಸರ್ವರ್‌ಗಳನ್ನು ಅಕ್ತರ್‌ ನಿತ್ಯ 25 ಸಾವಿರ ರೂ. ಗೆ(ಪ್ರತಿ ಸರ್ವರ್‌ಗೆ 5 ಸಾವಿರ ರೂ.) ದುಬೈ ಮೂಲದ ವ್ಯಕ್ತಿಗಳಿಗೆ ಬಾಡಿಗೆ ನೀಡಿದ್ದ ಎಂದು ಸೈಬರ್‌ ಕ್ರೈಂ ಪೊಲೀಸರು ಹೇಳಿದರು.


ವಂಚನೆ ನಡೆದಿದು ಹೇಗೆ?

-ಮಾರತ್ತಹಳ್ಳಿಯಲ್ಲಿ ಶಾಖೆ ಹೊಂದಿರುವ ವಿಜ್ಡಮ್‌ ಫೈನಾನ್ಸ್‌ ಪ್ರೈವೇಟ್ ಲಿಮಿಟೆಡ್‌

-ಗ್ರಾಹಕರಿಗೆ ಸಾಲ ನೀಡಲು ಮನಿವ್ಯೂವ್‌ ಎಂಬ ಆಯಪ್‌ ಸಿದ್ಧಪಡಿಸಿದ್ದ ಸಂಸ್ಥೆ

-ಆಯಪ್‌ನಲ್ಲಿ ಗ್ರಾಹಕರು ಕೆವೈಸಿ ನೀಡಿದರೆ 5 ಲಕ್ಷ ರೂ. ಸಾಲ ಮಂಜೂರು

- ಫೈನಾನ್ಸ್‌ನ ಸರ್ವರ್‌, ಆಯಪ್‌ ಅನ್ನು ಹ್ಯಾಕ್‌ ಮಾಡಿದ ವಂಚಕರು

- ಅಕ್ರಮವಾಗಿ ತೆರೆದಿದ್ದ ಖಾತೆಗಳಿಗೆ 47 ಕೋಟಿ ರೂ. ವರ್ಗಾವಣೆ

- ದುಬೈ ಮೂಲದ ಸೈಬರ್‌ ಕಳ್ಳರಿಗೆ ಇಬ್ಬರು ಸ್ಥಳೀಯ ಆರೋಪಿಗಳಿಂದ ನೆರವು

- ಸಿಸಿಬಿ ಕಾರ್ಯಾಚರಣೆ ವೇಳೆ ಇಬ್ಬರ ಬಂಧನ, 10 ಕೋಟಿ ರೂ. ಜಪ್ತಿ


ದುಬೈನಲ್ಲಿ ಕುಳಿತು ವಂಚಿಸುವ ಜಾಲ ಪತ್ತೆ

ದುಬೈನಲ್ಲಿ ಕುಳಿತು ವಂಚನೆಯ ಜಾಲ ನಡೆಸುತ್ತಿದ್ದ ಭಾರತೀಯ ಮೂಲದ ಇಬ್ಬರು ಆರೋಪಿಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುತ್ತದೆ. ಇನ್ನು ಅವರ ಬಂಧನಕ್ಕಾಗಿ ಕೇಂದ್ರದ ತನಿಖಾ ಸಂಸ್ಥೆಗಳ ಜತೆ ಜಂಟಿ ಕಾರ್ಯಾಚರಣೆ ನಡೆಸಲಾಗುತ್ತದೆ.

Post a Comment

Previous Post Next Post