ಬೇಡವೆಂದಿದ್ದ ಪೇಟವೇ ಪ್ರಧಾನಿ ನರೇಂದ್ರ ಮೋದಿ ಮುಡಿಗೇರಿತು! ತುಮಕೂರಿನ ಉಷಾ ಭಾಸ್ಕರ್‌ ಎರಡು ದಿನಗಳಲ್ಲಿ ತಯಾರಿಸಿಕೊಟ್ಟ ಪೇಟ


 [ಡುಪಿ: ಉಡುಪಿಗೆ ಪ್ರಧಾನಿ ಭೇಟಿಯ ಎರಡು ದಿನಗಳ ಹಿಂದೆಯಷ್ಟೇ ತರಾತುರಿಯಲ್ಲಿ ತುಮಕೂರಿನ ಉಷಾ ಭಾಸ್ಕರ್‌ ತಯಾರಿಸಿಕೊಟ್ಟ ಪೇಟ ಬೇಡವೆಂದಿದ್ದರೂ ಪರ್ಯಾಯ ಶ್ರೀಗಳ ಆಯ್ಕೆಯಂತೆ ಪ್ರಧಾನಿ ಮೋದಿ ಶಿರವನ್ನು ಅಲಂಕರಿಸಿದೆ.ಶ್ರೀಕೃಷ್ಣ ಮಠ, ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಲಕ್ಷ ಕಂಠ ಗೀತಾ ಪಾರಾಯಣ ವೇದಿಕೆಯಲ್ಲಿಪ್ರಧಾನಿ ಮೋದಿಯನ್ನು ನವಿಲು ಗರಿಯುಳ್ಳ ಮುತ್ತಿನ ಪೇಟ ತೊಡಿಸಿ ಶುಕ್ರವಾರ ಗೌರವಿಸಲಾಗಿತ್ತು.

 ತುಮಕೂರಿನ ಸ್ನೇಹಿತೆಯೊಬ್ಬರು ಉಷಾ ಭಾಸ್ಕರ್‌ ಅವರಲ್ಲಿ ಉಡುಪಿಗೆ ಬರುವ ಪ್ರಧಾನಿಗಾಗಿ ಪೇಟ ತಯಾರಿಸಿ, ಫೊಟೋ ಕಳಿಸುವಂತೆ ಸೂಚಿಸಿದ್ದರು. ಹಲವು ಕಡೆಗಳಿಂದ ಪೇಟ ತರಿಸಿದ್ದು ತುಮಕೂರಿನ ಪೇಟ ಬೇಡವಂತೆ ಎನ್ನುವ ಮಾಹಿತಿ ಬಂದಿತ್ತು.


ನನ್ನ ಪೇಟಕ್ಕೆ ಮೋದಿ ತಲೆಯನ್ನು ಅಲಂಕರಿಸುವ ಅದೃಷ್ಟ ಇಲ್ಲವೆಂದು ಉಷಾ ಸುಮ್ಮನಾಗಿದ್ದರು. ಆದರೆ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ಹಲವು ಪೇಟಗಳ ನಡುವೆ ಉಷಾ ಭಾಸ್ಕರ್‌ ರಚಿಸಿದ ಸುಂದರ ಪೇಟವನ್ನು ಆಯ್ಕೆ ಮಾಡಿದ್ದರು.


ಟಿವಿಯಲ್ಲಿ ಪ್ರಧಾನಿಗೆ ತಾನು ರಚಿಸಿದ ಪೇಟ ತೊಡಿಸುವುದನ್ನು ನೋಡಿ ಉಷಾ ಅಚ್ಚರಿಗೊಳಗಾದರು. ಪೇಟದಲ್ಲಿ ಒಂದು ನವಿಲು ಗರಿ ಇಟ್ಟು, ಹೆಚ್ಚುವರಿಯಾಗಿ ಮೂರ್ನಾಲ್ಕು ನವಿಲು ಗರಿ ಜತೆಗಿಟ್ಟು ಕಳಿಸಿದ್ದು ಎರಡು ನವಿಲುಗರಿ ಮತ್ತೆ ಪೇಟ ಸೇರಿತ್ತು.


ಜರಿ ಪೇಟಕ್ಕೆ ಲೇಸ್‌ ಜೋಡಿಸಿ, ಪುರಿ ಜಗನ್ನಾಥನ ಸನ್ನಿಧಿಯಿಂದ ತಂದ ಮುತ್ತುಗಳನ್ನು ಪೋಣಿಸಿ, ಪೆಂಡೆಂಟ್‌ ಅಳವಡಿಸಿ, ತೃಪ್ತಿ ಸಿಗುವ ತನಕ ಉಷಾ ತಮ್ಮ ಕರಕುಶಲ ಕೌಶಲ್ಯವನ್ನು ಪ್ರಯೋಗಿಸಿದ್ದರು. 4,000 ರೂ. ವೆಚ್ಚವಾಗಿದ್ದು, ಪ್ರಧಾನಿ ಶಿರವೇರಿದ್ದು ಖುಷಿ ಕೊಟ್ಟಿದೆ.


ತುಮಕೂರು ಚಿಕ್ಕಪೇಟೆಯಲ್ಲಿ ಪತಿ ಚಿನ್ನ, ಬೆಳ್ಳಿ ಕೆಲಸದಲ್ಲಿ ತೊಡಗಿದ್ದು ಪಿಯುಸಿ ಬಳಿಕ ಡ್ರಾಯಿಂಗ್‌ ಆಸಕ್ತಿಯ ಉಷಾ ಕೊಬ್ಬರಿ ಕೆತ್ತನೆ, ಮದುವೆಗೆ ಡೆಕೊರೇಷನ್‌, ಸೀರೆ ಕುಚ್ಚು ಹಾಕುವುದರಲ್ಲಿ ನಿಪುಣರು. ಪ್ರಧಾನಿ ಮೋದಿ ಶಿರವೇರಿದ ಪೇಟ ಮಾಡಿಕೊಟ್ಟ ನಾನು ಅದೃಷ್ಟವಂತೆ ಎನ್ನುವ ಧನ್ಯತಾ ಭಾವವನ್ನು ವಿಜಯ ಕರ್ನಾಟಕದೊಂದಿಗೆ ವ್ಯಕ್ತಪಡಿಸಿದರು.




'ವಿಶೇಷ ಪ್ರೇರಣೆ ನೀಡುವ ಮನ್‌ ಕೀ ಬಾತ್‌'


ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯರವರ ಮನ್‌ ಕೀ ಬಾತ್‌ ಕಾರ್ಯಕ್ರಮವು ಒಂದು ವಿಶೇಷವಾದ ಪ್ರೇರಣೆ ನೀಡುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಬೆಂಗೇರಿಯ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿಭಾನುವಾರ ಆಯೋಜಿಸಿದ್ದ 128ನೇ ಆವೃತ್ತಿಯ ಮನ್‌ ಕೀ ಬಾತ್‌ ವೀಕ್ಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಪ್ರತಿ ಬಾರಿಯೂ ದೇಶದಲ್ಲಿ ನಡೆಯುತ್ತಿರುವ ಒಂದೊಂದು ಹೊಸ ವಿಷಯ ಮತ್ತು ಯೋಜನೆಗಳ ಬಗ್ಗೆ ವಿವರಿಸುತ್ತಾರೆ. ದೇಶದ ನಾಗರಿಕರೊಂದಿಗೆ ಪ್ರಧಾನಿಯವರು ನೇರವಾಗಿ ಸಂವಹನ ನಡೆಸುತ್ತಾರೆ ಎಂದರು.


ಸರಕಾರದ ನೀತಿಗಳು ಹಾಗೂ ದೇಶದ ಮೂಲೆ-ಮೂಲೆಗಳಿಂದ ಬರುವ ಪ್ರೇರಣಾದಾಯಕ ಕಥೆಗಳು, ಯಶಸ್ವಿ ವ್ಯಕ್ತಿಗಳ ಸಾಧನೆಗಳನ್ನು ಮೋದಿ ಹಂಚಿಕೊಳ್ಳುತ್ತಾರೆ. ದೇಶದಲ್ಲಿ ನಡೆಯುತ್ತಿರುವ ಸಾಹಸ ಕ್ರೀಡೆಗಳು, ಗ್ರೀನ್‌ ಹೈಡ್ರೋಜನ್‌ ತಂತ್ರಜ್ಞಾನ, ಜೇನು ಸಾಗಾಣಿಕೆಯಿಂದಾಗುವ ಲಾಭದ ಬಗ್ಗೆ, ದೇಶದ ಐತಿಹಾಸಿಕ ವಸ್ತು ಸಂಗ್ರಹಾಲಯ ಹಾಗೂ ಟ್ಯಾಗೋರ್‌ ಬೀಚ್‌ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಮನ್‌ ಕೀ ಬಾತ್‌ನಲ್ಲಿ ದೇಶದ ಜನರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ ಎಂದು ಜೋಶಿ ಶ್ಲಾಘಿಸಿದರು.

Post a Comment

Previous Post Next Post