oad Accident: ಅಪಘಾತಕ್ಕೊಳಗಾದ ವ್ಯಕ್ತಿಗೆ ತುರ್ತು ವೈದ್ಯಕೀಯ ನೆರವಿನ ಅವಶ್ಯಕತೆ ಇರುತ್ತದೆ. ಅದೆಷ್ಟೋ ಪ್ರಕರಣಗಳಲ್ಲಿ ಗಂಭೀರ ಗಾಯವಾಗಿ ಜೀವ ಹೋಗುತ್ತಿದ್ದರೂ ಯಾರೂ ನೆರವಿಗೆ ಮುಂದಾಗದೇ ಪ್ರಾಣ ಬಿಟ್ಟಿರುವ ಹಲವು ಪ್ರಕರಣಗಳು ನಿತ್ಯ ಕಣ್ಣ ಮುಂದೆಯೇ ಇರುತ್ತವೆ.
ಈ ಹಿನ್ನೆಲೆಯಲ್ಲಿ, ಜನರಲ್ಲಿ ಸಹಾಯ ಮನೋಭಾವನೆ ಹೆಚ್ಚಿಸಲು ಮೋದಿ ಸರ್ಕಾರ ಕ್ರಮ ಕೈಗೊಂಡಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಅಪಘಾತದ ಗಾಯಾಳುವಿನ ನೆರವಿಗೆ ಮುಂದಾಗುವ ಮೂರನೇ ವ್ಯಕ್ತಿಗೆ 25,000 ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ರಸ್ತೆ ಅಪಘಾತದ ವೇಳೆ ಸರಿಯಾದ ಸಮಯದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸುವ ಹೃದಯವಂತರಿಗೆ 25,000 ರೂ. ಬಹುಮಾನ ನೀಡಲಾಗುವುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಅಪಘಾತಕ್ಕೀಡಾದ ವ್ಯಕ್ತಿಗೂ ಸಿಗುತ್ತೆ ನೆರವು:
ಅಪಘಾತದಿಂದ ಅಥವಾ ಅಪಘಾತದ ಬಳಿಕ ವ್ಯಕ್ತಿಯು ಯಾವುದೇ ಆಸ್ಪತ್ರೆಗೆ ದಾಖಲಾದರೆ, ಅವರಿಗೆ ಒಂದೂವರೆ ಲಕ್ಷ ರೂ.ವರೆಗೂ ಧನಸಹಾಯ ನೀಡಲಾಗುವುದು ಅಥವಾ ಏಳು ವರ್ಷಗಳವರೆಗೆ ವೈದ್ಯರಿಂದ ಆಗುವ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗುವುದು ಎಂದು ಕೇಂದ್ರ ಸಚಿವರು ಈ ಕುರಿತಂತೆ ಮಾಹಿತಿ ನೀಡಿದ್ದಾರೆ.
ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಸಹಾಯ ಮಾಡುವ ಒಳ್ಳೆಯ ಜನರಿಗೆ 25,000 ರೂ. ಬಹುಮಾನ ನೀಡಲಾಗುವುದು. ಇದು ಪ್ರಸ್ತುತ 5,000 ರೂ. ಬಹುಮಾನಕ್ಕಿಂತ ಐದು ಪಟ್ಟು ಹೆಚ್ಚಾಗಿದೆ. ಜನರಲ್ಲಿ ಸಹಾಯದ ಮನೋಭಾವನೆಯನ್ನು ಬೆಳೆಸುವ ಸಲುವಾಗಿ ಸರ್ಕಾರ ಈ ಕ್ರಮ ಕೈಗೊಳ್ಳುತ್ತಿದೆ. ಅಪಘಾತದ ನಿರ್ಣಾಯಕ ಮೊದಲ ಗಂಟೆಯಲ್ಲಿ ರಸ್ತೆ ಅಪಘಾತಕ್ಕೊಳಗಾದವರನ್ನು ಆಸ್ಪತ್ರೆಗಳಿಗೆ ತಲುಪಿಸುವ ವ್ಯಕ್ತಿಗೆ ಪ್ರಸ್ತುತ ಬಹುಮಾನ ಸಾಕಾಗುವುದಿಲ್ಲ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಅಪಘಾತಗಳಲ್ಲಿ ಗಾಯಗೊಂಡವರಿಗೆ ಮೊದಲ ಏಳು ದಿನಗಳವರೆಗೆ ಸರ್ಕಾರವು 1.5 ಲಕ್ಷ ರೂ.ಗಳವರೆಗಿನ ಆಸ್ಪತ್ರೆ ವೆಚ್ಚವನ್ನು ಭರಿಸಲಿದೆ. "ಸರ್ಕಾರದ ಈ ಯೋಜನೆ/ಕ್ರಮ ಕೇವಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗಾಯಗೊಂಡವರಿಗೆ ಮಾತ್ರ ಸೀಮಿತವಲ್ಲ. ಬದಲಿಗೆ ರಾಜ್ಯ ಹೆದ್ದಾರಿಗಳಲ್ಲಿ ಗಾಯಗೊಂಡವರಿಗೂ ಸರ್ಕಾರದ ಈ ನೆರವು ದೊರೆಯಲಿದೆ" ಎಂದು ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.
ರಸ್ತೆ ಅಪಘಾತದಲ್ಲಿ ಸಹಾಯಕ್ಕೆ ಧಾವಿಸುವವರಿಗೆ ಬಹುಮಾನ/ಪ್ರತಿಫಲ ನೀಡುವ ಯೋಜನೆಯನ್ನು ಅಕ್ಟೋಬರ್ 2021 ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯ ಪ್ರಕಾರ, ಮಾರಣಾಂತಿಕ ಅಪಘಾತಕ್ಕೊಳಗಾದವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಗೋಲ್ಡನ್ ಅವರ್ ಒಳಗೆ ಆಸ್ಪತ್ರೆಗೆ ಸಾಗಿಸುವುದು ತುಂಬಾ ಅಗತ್ಯ. ಹಾಗಿದ್ದಾಗ ಅಪಘಾತಕ್ಕೊಳಗಾದ ವ್ಯಕ್ತಿಯನ್ನು ಉಳಿಸಲು ಸಾಧ್ಯವಾಗುತ್ತದೆ. ಅಪಘಾತದ ವೇಳೆ ತಕ್ಷಣದ ಸಹಾಯವನ್ನು ಒದಗಿಸುವ ಮೂಲಕ ಸಂತ್ರಸ್ತರ ಜೀವ ಉಳಿಸುವ ಜನರಿಗೆ ಬಹುಮಾನ ನೀಡಲಾಗುತ್ತದೆ.
ಪ್ರತಿವರ್ಷ ಸುಮಾರು 5 ಲಕ್ಷ ರಸ್ತೆ ಅಪಘಾತ:
ವರದಿಯೊಂದರ ಪ್ರಕಾರ, ಭಾರತದಲ್ಲಿ ಪ್ರತೀ ವರ್ಷ ಸುಮಾರು 5 ಲಕ್ಷ ಅಪಘಾತಗಳು ಸಂಭವಿಸುತ್ತವೆ. ಇಂತಹ ರಸ್ತೆ ಅಪಘಾತಗಳಲ್ಲಿ ಸುಮಾರು 2ಲಕ್ಷದಷ್ಟೂ 18ರಿಂದ 45 ವರ್ಷ ವಯಸ್ಸಿನ ಮಂದಿ ಸಾವನ್ನಪ್ಪುತ್ತಿದ್ದಾರೆ. 18 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಸುಮಾರು 10,000 ಮಂದಿ ಬಲಿಯಾಗುತ್ತಿದ್ದಾರೆ. ಇದೊಂದು ದೊಡ್ಡ ಸಾರ್ವಜನಿಕ ಸಮಸ್ಯೆಯಾಗಿದ್ದು ಈ ರಸ್ತೆ ಅಪಘಾತಗಳಿಂದ ಜಿಡಿಪಿಗೆ ಶೇ. 3ರಷ್ಟು ನಷ್ಟವಾಗುತ್ತಿದೆ ಎಂದು ನಿತಿನ್ ಗಡ್ಕರಿ ಬೇಸರ ವ್ಯಕ್ತಪಡಿಸಿದ್ದಾರೆ.

Post a Comment