ರಾಜ್ಯದ ಬೊಕ್ಕಸ ತುಂಬಿಸಲು ಹೊಸ ಪ್ಲಾನ್...ನಿಷ್ಕ್ರಿಯ ಅಬಕಾರಿ ಲೈಸೆನ್ಸ್‌ಗಳ ಹರಾಜು, 500 ಕೋಟಿ ರೂ. ಗುರಿ!


 ಜ್ಯದ ಬೊಕ್ಕಸ ತುಂಬಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಈಗ ಮತ್ತೊಂದು ಹೊಸ ಕ್ರಮ ತೆಗೆದುಕೊಂಡಿದೆ. ಇದು ಕೆಲವರ ವಿರೋಧಕ್ಕೆ ಕೂಡ ಗುರಿಯಾಗಿದೆ. ಅದೇನೆಂದರೆ ನಿಷ್ಕ್ರಿಯವಾಗಿರುವಂತಹ ಅಬಕಾರಿ ಲೈಸೆನ್ಸ್‌ಗಳನ್ನು, ಹಣಕಾಸು ಇಲಾಖೆ ಹರಾಜು ಮಾಡಲು ಮುಂದಾಗಿದೆ. ಈ ಮೂಲಕ ರಾಜ್ಯದ ಬೊಕ್ಕಸಕ್ಕೆ 500 ಕೋಟಿ ರೂ.

 ಹೆಚ್ಚುವರಿ ಆದಾಯ ತುಂಬಿಸಲು ಮುಂದಾಗಿದೆ.

ಸರ್ಕಾರವು ವಿಶೇಷವಾಗಿ CL-2 (ಚಿಲ್ಲರೆ ಮದ್ಯದ ಅಂಗಡಿ) ಮತ್ತು CL-9 (ಬಾರ್ ಮತ್ತು ರೆಸ್ಟೋರೆಂಟ್) ಪರವಾನಗಿಗಳನ್ನು ಹರಾಜು ಹಾಕಲು ತೀರ್ಮಾನಿಸಿದೆ. ಜೊತೆಗೆ, ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್‌ (MSIL) ಮೂಲಕ ನಡೆಯುವ ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳಿಗೆ ನೀಡಲ್ಪಟ್ಟ CL-11(C) ಪರವಾನಗಿಗಳನ್ನು ಸಹ ಹರಾಜು ಮಾಡಲು ಸಿದ್ದತೆ ನಡೆದಿದೆ. ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಕಚೇರಿಯ ಪ್ರಕಾರ, ಒಟ್ಟು 579 ನಿಷ್ಕ್ರಿಯ ಪರವಾನಗಿಗಳು ಹರಾಜಿಗೆ ಬರಲಿವೆ.


1992ರಿಂದ ರಾಜ್ಯದಲ್ಲಿ ಹೊಸ CL-2 ಮತ್ತು CL-9 ಪರವಾನಗಿಗಳನ್ನು ನೀಡಲಾಗುತ್ತಿಲ್ಲ. ಪ್ರಸ್ತುತ ರಾಜ್ಯದಲ್ಲಿ 3,995 CL-2 ಹಾಗೂ 3,637 CL-9 ಪರವಾನಗಿಗಳು ಇವೆ. ಇವುಗಳನ್ನು ವರ್ಷಕ್ಕೊಮ್ಮೆ ನವೀಕರಿಸಲಾಗುತ್ತದೆ. ಹೊಸ ಪರವಾನಗಿಗಳಿಲ್ಲದ ಕಾರಣದಿಂದ ಹಳೆಯ ಪರವಾನಗಿಗಳಿಗೆ ಭಾರೀ ಬೇಡಿಕೆ ಇರುತ್ತದೆ. ಕೆಲವೊಮ್ಮೆ ಒಂದು ಪರವಾನಗಿಗೆ ಕೋಟ್ಯಾಂತರ ರೂಪಾಯಿ ಬೆಲೆಯೂ ಕೇಳಲಾಗುತ್ತದೆ. ಆದರೆ ಸರ್ಕಾರವು ಪಡೆಯುವ ಶುಲ್ಕ CL-2ಗೆ 4-6 ಲಕ್ಷ ರೂ. ಹಾಗೂ CL-9ಗೆ 4-7.5 ಲಕ್ಷ ರೂ.ಗಳಷ್ಟೇ ಇರುತ್ತದೆ.


ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರ ಪ್ರಕಾರ, ಬೆಂಗಳೂರಿನಲ್ಲಿ ಒಂದೇ ಪರವಾನಗಿಗೆ 3.8 ಕೋಟಿ ರೂ.ಗಳವರೆಗೆ ಬೆಲೆ ಸಿಗುತ್ತದೆ. ಹರಾಜಿನಲ್ಲಿ ಪ್ರತಿ ಪರವಾನಗಿಗೆ 3 ಕೋಟಿ ರೂ.ಗಳವರೆಗೆ ಬರಬಹುದು ಎಂಬ ನಿರೀಕ್ಷೆಯಿದೆ. ಬೆಂಗಳೂರಿನ ಹೊರಗೆ ಒಂದು ಪರವಾನಗಿಗೆ ಸುಮಾರು 1 ಕೋಟಿ ರೂ.ಗಳವರೆಗೆ ಸಿಗುವ ಸಾಧ್ಯತೆ ಇದೆ. ಇದರಿಂದ ಸರ್ಕಾರಕ್ಕೆ ಒಟ್ಟು 500 ಕೋಟಿ ರೂ.ಗಳವರೆಗೆ ಆದಾಯ ಬರಬಹುದು.


ಕರಡು ನಿಯಮಗಳ ಪ್ರಕಾರ, ಹರಾಜು ಮಾಡಲಿರುವ ಪರವಾನಗಿಗಳಿಗೆ CL-2A ಮತ್ತು CL-9A ಎಂಬ ಎರಡು ಹೊಸ ವಿಭಾಗಗಳನ್ನು ರಚಿಸಲಾಗುವುದು. ಜೊತೆಗೆ, ಪರವಾನಗಿದಾರರ ಮರಣದ ಸಂದರ್ಭದಲ್ಲಿ ಅವರ ಕಾನೂನುಬದ್ಧ ವಾರಸುದಾರರಿಗೆ ಪರವಾನಗಿ ವರ್ಗಾಯಿಸಲು ಅವಕಾಶ ಕಲ್ಪಿಸಲಾಗುತ್ತದೆ.


ರಾಜ್ಯದ ಅಬಕಾರಿ ಆದಾಯವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2024-25ರಲ್ಲಿ 35,783 ಕೋಟಿ ರೂ. ಆದಾಯ ಗಳಿಸಿದ ಸರ್ಕಾರವು ಈ ಹಣಕಾಸು ವರ್ಷದಲ್ಲಿ 40,000 ಕೋಟಿ ರೂ.ಗಳ ಗುರಿ ಹೊಂದಿದೆ. ಆಗಸ್ಟ್ ವರೆಗೆ ಈಗಾಗಲೇ 16,358 ಕೋಟಿ ರೂ.ಗಳ ಅಬಕಾರಿ ಆದಾಯ ಸಂಗ್ರಹವಾಗಿದೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ರ ಬಜೆಟ್‌ನಲ್ಲಿ ಪಾರದರ್ಶಕ ಎಲೆಕ್ಟ್ರಾನಿಕ್ ಹರಾಜಿನ ಮೂಲಕ ಬಳಕೆಯಾಗದ ಮದ್ಯ ಪರವಾನಗಿಗಳನ್ನು ಹಂಚಿಕೆ ಮಾಡುವುದಾಗಿ ಘೋಷಿಸಿದ್ದರು. ಈ ಕ್ರಮದಿಂದ ರಾಜ್ಯಕ್ಕೆ ಹೆಚ್ಚುವರಿ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಸಹಾಯವಾಗಲಿದೆ ಎಂದು ಅವರು ಹೇಳಿದ್ದಾರೆ.

Post a Comment

Previous Post Next Post