: ಜ್ಯದ ಜನರ ಚಿತ್ತ ಬಜೆಟ್ನತ್ತ ಹರಿದಿದೆ. ಇದೇ ಮಾರ್ಚ್ 7ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16ನೇ ದಾಖಲೆಯ ಬಜೆಟ್ನ ಮಂಡನೆ ಮಾಡಲಿದ್ದಾರೆ. ಜನರಿಂದ ಸಾಕಷ್ಟು ನಿರೀಕ್ಷೆಗಳೂ ವ್ಯಕ್ತವಾಗುತ್ತಿವೆ. ಯಾವೆಲ್ಲಾ ಕ್ಷೇತ್ರಗಳಿಗೆ ಸಿದ್ದರಾಮಯ್ಯ ಸರ್ಕಾರದ ಬಜೆಟ್ ಸಿಗುತ್ತದೆ, ಎಷ್ಟು ಅನುದಾದ ಸಿಗುತ್ತದೆ.
ಅಭಿವೃದ್ಧಿ ಬಗ್ಗೆ ಈ ಬಾರಿಯ ರಾಜ್ಯ ಬಜೆಟ್ ಎಷ್ಟು ಒತ್ತು ನೀಡಿದೆ ಎಂಬ ಕುತೂಹಲಗಳು ಕೂಡ ಕವಲೊಡೆದಿವೆ.
ಕರ್ನಾಟಕದಲ್ಲಿ ಈಗಾಗಲೇ ಬಡವರ ಉತ್ತೇಜನ, ಆರ್ಥಿಕ ಪ್ರಗತಿಗಾಗಿ ಐದು ಗ್ಯಾರಂಟಿಗಳನ್ನು ನೀಡಲಾಗಿದೆ. ಅದರ ಅನುಸಾರ ಫಲಾನುವಿಗಳ ಅದರ ಸಹಾಯ ಪಡೆದುಕೊಳ್ಳುತ್ತಿದ್ದಾರೆ. ಇದನ್ನು ಹೊರತುಪಡಿಸಿ ರಾಜ್ಯ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು, ಈ ಗ್ಯಾರಂಟಿ ಬಗ್ಗೆ ಕೊಂಚ ಅಸಮಾಧಾನವೂ ವ್ಯಕ್ತವಾಗುತ್ತಿದೆ. ಏಕೆಂದರೆ ಬಜೆಟ್ನ ಉತ್ತಮ ಸೌಲಭ್ಯದ ನಿರೀಕ್ಷೆಯಲ್ಲಿರುವವರಿಗೆ, ಗ್ಯಾರಂಟಿ ಯೋಜನೆಗಳೇ ದೊಡ್ಡ ತಲೆಬಿಸಿಯಾಗಿವೆ. ಈಗಾಗಲೇ ಗ್ಯಾರಂಟಿಗಳಿಗೆ ಸಾಕಷ್ಟು ಹಣ ಖರ್ಚಾಗಿದೆ. ಇನ್ನು ಬಜೆಟ್ ಘೋಷಣೆಗೆ ಎಲ್ಲಿಂದ ಹಣ ಹೊಂದಿಸಬಹುದು ಎಂಬ ಗೊಂದಲಗಳಿವೆ. ಹಾಗೆಯೇ ಬಜೆಟ್ನಲ್ಲಿ ಮಹಿಳೆಯರಿಗಾಗಿಯೇ ಮತ್ತಷ್ಟು ಪುಷ್ಠಿ ನೀಡಿದರೆ, ಉಳಿದ ಯೋಜನೆಗಳಿಗೆ ತಿಲಾಂಜಲಿ ಬಿಡಬೇಕಾ ಎಂಬ ಪ್ರಶ್ನೆಯೂ ಕಾಡುತ್ತಿದೆ. ಸಾಕಷ್ಟು ಯೋಜನೆಗಳ ಅಭಿವೃದ್ಧಿಯಾಗಬೇಕಿದ್ದು, ಗ್ಯಾರಂಟಿಗಳಿಗೇ ಹಣ ವೆಚ್ಚವಾಗುತ್ತಿರುವುದು ಎಲ್ಲರಿಗೂ ಅಸಮಾಧಾನದ ಸಂಗತಿ. ಹಾಗಾದ್ರೆ ಜನರು ಬಜೆಟ್ನಿಂದ ಏನೆಲ್ಲಾ ನಿರೀಕ್ಷೆ ಮಾಡಬಹುದು ಎಂದು ನೋಡೋಣ ಬನ್ನಿ.
ಇನ್ನು 2025-26ನೇ ಸಾಲಿನ ಕರ್ನಾಟಕ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ.ಗಳನ್ನು ಮೀರಬಹುದು ಎಂದು ಅಂದಾಜಿಸಲಾಗಿದೆ. ರಾಜ್ಯದ ಇತಿಹಾಸದಲ್ಲೇ ಇದೊಂದು ದಾಖಲೆಯ ಬಜೆಟ್ ಆಗಬಹುದು ಎಂಬ ನಿರೀಕ್ಷೆಯೂ ಇದೆ. ಸರ್ಕಾರವು ತನ್ನ ಮುಖ್ಯ ಯೋಜನೆಗಳಾದ ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ ಮತ್ತು ಯುವನಿಧಿ ಯೋಜನೆಗಳನ್ನು ನಿರ್ವಹಿಸಲು ಹೆಚ್ಚಿನ ಸಂಪತ್ತಿನ ಅವಶ್ಯಕತೆಯನ್ನು ಎದುರಿಸುತ್ತಿದೆ. ಇವುಗಳಿಂದ ರಾಜ್ಯದ ಆರ್ಥಿಕ ಸ್ಥಿತಿಯ ಮೇಲೆ ಒತ್ತಡ ಹೆಚ್ಚಾಗಬಹುದು. ಮತ್ತು ಸರ್ಕಾರವು ಹೊಸ ಆದಾಯ ಮೂಲಗಳನ್ನು ಹುಡುಕುವ ಅಗತ್ಯವಿರುವ ಕಾರಣದಿಂದ, ತೆರಿಗೆ ನೀತಿಗಳ ಪರಿಷ್ಕರಣೆ ಮತ್ತು ಕೇಂದ್ರದಿಂದ ಹೆಚ್ಚಿನ ಅನುದಾನ ಪಡೆಯಲು ಯತ್ನಿಸುವುದು ಅತ್ಯಗತ್ಯವಾಗಿದೆ.
ಬಜೆಟ್ ಮೇಲಿನ ನಿರೀಕ್ಷೆಗಳು:
1. ಗ್ಯಾರಂಟಿಗಳಿಗೆ ಹೆಚ್ಚಿನ ಅನುದಾನ ಮೀಸಲು ಸಾಧ್ಯತೆ:
ಈಗಾಗಲೇ ಕರ್ನಾಟಕದಲ್ಲಿ ಪಂಚ ಗ್ಯಾರಂಟಿಗಳು ಚಾಲ್ತಿಯಲ್ಲಿವೆ. ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ ಮತ್ತು ಯುವನಿಧಿ ಯೋಜನೆಗಳು, ಸಿದ್ದರಾಮಯ್ಯ ಸರ್ಕಾರ ಇರುವವರೆಗೂ ನಡೆಸಬೇಕು ಎಂದರೆ ಅನುದಾನವಂತೂ ಬೇಕೇ ಬೇಕು. ಅಲ್ಲದೇ ಒಂದೇ ಗ್ಯಾರಂಟಿಯೂ ನಡೆಸುವುದಲ್ಲ. ಐದು ಗ್ಯಾರಂಟಿ ನಡೆಸಬೇಕು ಎಂದರೆ, ಆಯಾ ವಲಯಗಳಿಗೆ ಸಾಕಷ್ಟು ಅನುದಾನ ಬೇಕು. ಹೀಗಾಗಿ ಇವುಗಳ ನಿರ್ವಹಣೆಗೆ ಹೆಚ್ಚಿನ ಅನುದಾನ ಮೀಸಲಾಗುವ ಸಾಧ್ಯತೆ ಇದೆ.
2. ಅಭಿವೃದ್ಧಿ ಯೋಜನೆಗಳಿಗೆ ಒತ್ತು:
ಸಾಮಾನ್ಯವಾಗಿ ಅಭಿವೃದ್ಧಿ ಎಂದರೆ ಶಿಕ್ಷಣ ಕ್ಷೇತ್ರದ ಬೆಳವಣಿಗೆ. ಹಾಗೂ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣದಂತಹ ಅಭಿವೃದ್ಧಿ. ಹೀಗಾಗಿ ಈ ಕ್ಷೇತ್ರಗಳಿಗೆ ಹೆಚ್ಚುವರಿ ಅನುದಾನ ನಿರೀಕ್ಷಿಸಲಾಗುತ್ತಿದೆ.
3. ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆ:
ರಾಜ್ಯದ ಆರ್ಥಿಕ ಸಮತೋಲನ ಕಾಪಾಡಲು, ಬಜೆಟ್ನಲ್ಲಿ ಖರ್ಚು ಮತ್ತು ಆದಾಯದ ನಡುವಣ ಸಮರ್ಥ ನಿರ್ವಹಣೆಗೆ ಆದ್ಯತೆ ನೀಡುವ ನಿರೀಕ್ಷೆಯಿದೆ.
5. ವೈದ್ಯಕೀಯ ವಲಯಗಳ ಪ್ರಗತಿ:
ಪ್ರತಿ ಬಜೆಟ್ನಲ್ಲಿಯೂ ವೈದ್ಯಕೀಯ ಕ್ಷೇತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿರುತ್ತವೆ. ಸದ್ಯ ವೈದ್ಯಕೀಯ ವಲಯ ಜಿಎಸ್ಟಿ ವ್ಯಾಪ್ತಿಗೆ ಬಂದಿದ್ದೇ ದೊಡ್ಡ ತಲೆನೋವಾಗಿದೆ. ಹೀಗಾಗಿ ವೈದ್ಯಕೀಯ ಸರಕು ಮೇಲಿನ ಜಿಎಸ್ಟಿ ಕಡಿಮೆ ಮಾಡುವಂತೆ ಒತ್ತಾಯ ಕೇಳಿ ಬರುತ್ತಿದೆ. ಜೊತೆಗೆ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಹೆಚ್ಚಿನ ಹಣಕಾಸು ಸೌಲಭ್ಯ ಒದಗಿಸುವಂತೆ ಮನವಿ ಮಾಡಲಾಗಿದೆ.
6. ಮೇಕೆದಾಟು ಯೋಜನೆ:
ಹಲವು ವರ್ಷಗಳಿಂದ ಕೇಳಿ ಬರುತ್ತಿರುವ ಕೂಗು ಮೇಕೇದಾಟು ಯೋಜನೆಯನ್ನು ಅಭಿವೃದ್ಧಿಗೊಳಿಸಬೇಕು ಎಂದು. ಈ ಯೋಜನೆಯ ಪರವಾಗಿ ಕಾಂಗ್ರೆಸ್ ನಾಯಕರೇ ಹೋರಾಟ ನಡೆಸಿದ್ದರು. ಹೀಗಾಗಿ ಈ ಬಾರಿ ಬಜೆಟ್ನಲ್ಲಿ ಮೇಕೆದಾಟು ಯೋಜನೆಗೆ ಒತ್ತು ಕೊಡಲಾಗುತ್ತಾ ಎಂಬ ಕುತೂಹಲವಿದೆ.
7. ಹೊಸ ಜಿಲ್ಲೆಗಳ ರಚನೆ ಬಗ್ಗೆ ನಿರೀಕ್ಷೆ:
ಈಗಾಗಲೇ ರಾಜ್ಯದಲ್ಲಿ ಹೊಸ ಜಿಲ್ಲೆಗಳ ರಚನೆ ಕೇಳಿ ಬರುತ್ತಿದೆ. ಅದರಲ್ಲಿ ಪ್ರಮುಖವಾಗಿ ಬೆಳಗಾವಿಯಲ್ಲಿರುವ ಗೋಕಾಕ್, ಬೈಲಹೊಂಗಲ, ಚಿಕ್ಕೋಡಿ, ಕಿತ್ತೂರು. ತುಮಕರು ಜಿಲ್ಲೆಯಲ್ಲಿರುವ ತಿಪಟೂರು, ಮಧುಗಿರಿ. ಉತ್ತರಕನ್ನಡದ ಶಿರಸಿ. ಮೈಸೂರಿನ ಹುಣಸೂರು. ಶಿವಮೊಗ್ಗದಲ್ಲಿ ಶಿಕಾರಿಪುರ, ಸಾಗರ. ದಕ್ಷಿಣ ಕನ್ನಡದಲ್ಲಿ ಪುತ್ತೂರು. ಬಾಗಲಕೋಟೆಯಲ್ಲಿ ಜಮಖಂಡಿ. ವಿಜಯಪುರದಲ್ಲಿ ಇಂಡಿ. ರಾಯಚೂರಿನ ಸಿಂಧನೂರು. ಕಲಬುರಗಿಯ ಸೇಡಂ ಮತ್ತು ಶಹಾಪುರ. ಹಾಗೂ ಕೊಪ್ಪಳದಲ್ಲಿರುವ ಗಂಗಾವತಿ.ಇವಿಷ್ಟು ಜಿಲ್ಲೆಗಳನ್ನು ರಚನೆ ಮಾಡಬೇಕೆಂದು ಕೂಗು ಕೇಳಿ ಬರುತ್ತಿದೆ.
ಕರ್ನಾಟಕ ಬಜೆಟ್ ಬಗ್ಗೆ ಇನ್ನೂ ಸಾಕಷ್ಟು ನಿರೀಕ್ಷೆಗಳಿವೆ. ಇದಿಷ್ಟು ನಿರೀಕ್ಷೆಗಳನ್ನು ಪೂರೈಸಲು, ಕೇಂದ್ರ ಸರ್ಕಾರದಿಂದ 11,495 ಕೋಟಿ ರೂ. ವಿಶೇಷ ಅನುದಾನವನ್ನು ಕೇಳಿದೆ. ಇದನ್ನೆಲ್ಲಾ ತೂಗಿಸಲು ಕರ್ನಾಟಕ ಸರ್ಕಾರ ಹೊಸ ಆದಾಯಗಳ ಮೂಲವನ್ನು ಹುಡುಕುತ್ತಿದೆ. ಅಂದರೆ ತೆರಿಗೆ ನೀತಿಗಳ ಪರಿಷ್ಕರಣೆ ಮಾಡಬಹುದು. ಪ್ರಮುಖವಾಗಿ ಮದ್ಯದ ಬೇಡಿಕೆ ಎಂದಿಗೂ ಕಡಿಮೆಯಾಗುವುದಿಲ್ಲ ಎಂದು ಅರಿತು, ಮದ್ಯದ ತೆರಿಗೆ ಹೆಚ್ಚಾಗಬಹುದು ಎನ್ನಲಾಗುತ್ತಿದೆ.
ಇನ್ನು ಸರ್ಕಾರವು ತನ್ನ ಮುಖ್ಯ ಯೋಜನೆಗಳಾದ ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ ಮತ್ತು ಯುವನಿಧಿ ಯೋಜನೆಗಳನ್ನು ನಿರ್ವಹಿಸಲು ಹೆಚ್ಚಿನ ಸಂಪತ್ತಿನ ಅವಶ್ಯಕತೆಯನ್ನು ಎದುರಿಸುತ್ತಿದೆ. ಹೀಗಾಗಿ ಸರ್ಕಾರವು ಬಜೆಟ್ ಪೂರ್ವ ಚರ್ಚೆಗಳನ್ನು ನಡೆಸಿ, ವಿವಿಧ ಇಲಾಖೆಗಳ ಸಲಹೆಗಳನ್ನು ಪರಿಗಣಿಸುತ್ತಿದೆ. ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ ಸೇರಿದಂತೆ ಹಲವಾರು ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗುವ ನಿರೀಕ್ಷೆಯಿದೆ. ಒಟ್ಟಾರೆ, 2025-26ನೇ ಸಾಲಿನ ಕರ್ನಾಟಕ ಬಜೆಟ್ ಹೊಸ ಆರ್ಥಿಕ ಬದಲಾವಣೆಗಳೊಂದಿಗೆ ರಾಜ್ಯದ ಅಭಿವೃದ್ಧಿಗೆ ಪೂರಕವಾಗುವಂತೆ ರೂಪುಗೊಳ್ಳಲಿದೆ.

Post a Comment