ಶೇ 40 ಕಮಿಷನ್: ಕೆಂಪಣ್ಣ ನೇತೃತ್ವದ ನಿಯೋಗದಿಂದ ಸಿದ್ದರಾಮಯ್ಯ ಭೇಟಿ


  ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಶೇ 40 ಕಮಿಷನ್ ಆರೋಪ ಹೊರಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನೇತೃತ್ವದ ಗುತ್ತಿಗೆದಾರರ ನಿಯೋಗ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿ ಚರ್ಚೆ ನಡೆಸಿದೆ. ಆ ಮೂಲಕ, ಶೇ 40 ಕಮಿಷನ್‌ ಆರೋಪ ಮತ್ತೆ ಜೀವ ಪಡೆದುಕೊಂಡಿದೆ. ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿರುವ ಗುತ್ತಿಗೆದಾರರ ಸಂಘ, ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿಗೆ ಮತ್ತೊಂದು ಪತ್ರ ಬರೆಯಲು ಕೂಡಾ ಮುಂದಾಗಿದೆ. ಅದಕ್ಕೂ ಮೊದಲು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕೆಂಪಣ್ಣ ನೇತೃತ್ವದ ನಿಯೋಗ ಮಾತುಕತೆ ನಡೆಸಿದೆ. 

ಸ್ವಾತಂತ್ರ್ಯ ದಿನಾಚರಣೆ ವೇಳೆ ದೇಶವನ್ನು ಉದ್ದೇಶಿಸಿ ಮಾಡಿ ಭಾಷಣದಲ್ಲಿ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದ್ದ ಪ್ರಧಾನಿ ಮೋದಿ, ದೇಶಕ್ಕೆ ಭ್ರಷ್ಟಾಚಾರ ದೊಡ್ಡ ಮಾರಕ, ಶತ್ರು ಎಂದಿದ್ದರು. ಮೋದಿ ಅವರ ಮಾತನ್ನು ಉಲ್ಲೇಖಿಸಿ‌ ಅಭಿನಂದನೆ ಪತ್ರ ಬರೆಯಲು ಕೆಂಪಣ್ಣ ನಿರ್ಧರಿಸಿದ್ದಾರೆ. 

ಜೊತೆಗೆ, ಒಂದೂವರೆ ವರ್ಷವಾದರೂ ಗುತ್ತಿಗೆದಾರರು ನೀಡಿರುವ ದೂರಿಗೆ ಯಾವ ಕ್ರಮಕೈಗೊಂಡಿದ್ದೀರಿ? ಎಂಬುದನ್ನೂ ಪ್ರಸ್ತಾಪಿಸಲಿದ್ದಾರೆ. ಆ ಮೂಲಕ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಪ್ರಸ್ತಾಪಿಸಲು ಅವರು ಮುಂದಾಗಿದ್ದಾರೆ.

Post a Comment

Previous Post Next Post